ಕರ್ನಾಟಕ ಹಾಲು ಮಹಾಮಂಡಳಿ, ಕೆಎಂಎಫ್ ಎಂದು ಪ್ರತೀತಿಗಳಿಸಿ ಕರ್ನಾಟಕ ರಾಜ್ಯದಲ್ಲೇ ಉತ್ತಮ ಲಾಭದಾಯಕ ಹಾಗೂ ಮುಂಚೂಣಿಯಲ್ಲಿರುವ ಸಹಕಾರಿ ಸಂಸ್ಥೆಯಾಗಿದೆ.
ಕರ್ನಾಟಕ ಡೇರಿ ಅಭಿವೃದ್ಧಿ ನಿಗಮವು (KDDC) 1975ರಲ್ಲಿ ಸ್ಥಾಪನೆ ಹೊಂದಿ ವಿಶ್ವ ಬ್ಯಾಂಕಿನ ನೆರವಿನ ಡೇರಿ ಅಭಿವೃದ್ಧಿಯನ್ನು ಕಾರ್ಯಗತ ಮಾಡುವಲ್ಲಿ ಮೊಟ್ಟ ಮೊದಲ ಸಂಸ್ಥೆಯಾಗಿ ಬೆಳೆದು ಬಂದು ಈ ಸಂಸ್ಥೆ ರಾಜ್ಯದೆಲ್ಲೆಡೆ ವಿಸ್ತರಿಸಿ ರಾಜ್ಯದ ಗ್ರಾಮೀಣ ಆರ್ಥಿಕ ಅಭಿವೃದ್ದಿಯಲ್ಲಿ ಚುಕ್ಕಾಣಿ ಹಿಡಿಯುವಂತಹ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ. 1984ರಲ್ಲಿ ಕೆ.ಡಿ.ಡಿ.ಸಿ.ಯು, ಕೆಎಂಎಫ್. ಯೆಂದು ನಾಮಕರಣಗೊಂಡು ತನ್ನ 16 ಹಾಲು ಒಕ್ಕೂಟಗಳ ಸಮಗ್ರ ಡೇರಿ ಚಟುವಟಿಕೆಗಳಿಂದ ಉತ್ತಮ ಸಂಸ್ಥೆಯಾಗಿ ಬೆಳೆದಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ರಚನೆ, ಅಗತ್ಯಕ್ಕೆ ತಕ್ಕಂತೆ ಹಾಲು ಶೇಖರಣಾ ಮತ್ತು ವಿತರಣಾ ಮಾರ್ಗಗಳ ಸ್ಥಾಪನೆ, ಪಶು ವೈದ್ಯಕೀಯ ಸೇವೆಗಳು, ಹಾಲನ್ನು ಶೀತಲಗೊಳಿಸುವಲ್ಲಿ, ಸಂಸ್ಕರಿಸುವಲ್ಲಿ, ವಿತರಿಸುವಲ್ಲಿ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಬಲ್ಕ್ ಮಿಲ್ಕ್ ಕೂಲರ್ಗಳು, ಶೀತಲಕೇಂದ್ರಗಳು, ಡೇರಿಗಳು, ಪಶು ಆಹಾರ ಘಟಕಗಳು, ನಂದಿನಿ ವೀರ್ಯಾಣು ಕೇಂದ್ರ, ದ್ರವ ಸಾರಜನಕ ಸರಬರಾಜು ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ವಿಸ್ತರಿಸಿ ಬೆಳೆದು ನಿಂತ ಅಗ್ರ ಸಂಸ್ಥೆಯಾಗಿದೆ.
'ಆನಂದ್' ಮಾದರಿಯಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸುತ್ತಾ ಮೊದಲಿಗೆ ದಕ್ಷಿಣ ಕರ್ನಾಟಕದ 08 ಜಿಲ್ಲೆಗಳನ್ನೊಳಗೊಂಡು ವಿಸ್ತರಿಸಿದ ಡೇರಿ ಅಭಿವೃದ್ಧಿ ಚಟುವಟಿಕೆಗಳು, 1800 ಹಾಲು ಉತ್ಪಾದಕರ ಸಹಕಾರ ಸಂಘಗಳ ರಚನೆ, 04 ಜಿಲ್ಲಾ ಹಾಲು ಒಕ್ಕೂಟಗಳ ಸಂಘಟನೆಯಿಂದ ದಿನವಹಿ 6.5 ಲಕ್ಷ ಲೀಟರುಗಳ ಹಾಲು ಸಂಸ್ಕರಿಸುವ ಸಾಮರ್ಥ್ಯದೊಂದಿಗೆ ಹೈನುಗಾರಿಕೆ ಅಭಿವೃದ್ದಿ ಯೋಜನೆ ಪ್ರಾರಂಭಿಸಲಾಯಿತು.
ಆಪರೇಷನ್ ಫ್ಲಡ್/ ಕ್ಷೀರದಾರೆ ಯೋಜನೆ II ಮತ್ತು III ಅನುಕ್ರಮವಾಗಿ 1984 ಮತ್ತು 1987ರಲ್ಲಿ ಪ್ರಾರಂಭಿಸಿದ್ದು ಡೇರಿ ಅಭಿವೃದ್ಧಿ ಚಟುವಟಿಕೆಗಳನ್ನು ರಾಜ್ಯದ ಅಂದಿನ ಎಲ್ಲಾ 20 ಜಿಲ್ಲೆಗಳ 175 ತಾಲ್ಲೂಕುಗಳಲ್ಲಿ ಹಮ್ಮಿಕೊಂಡು ಒಟ್ಟಾರೆ 16 ಹಾಲು ಒಕ್ಕೂಟಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಹಾಲು ಸಂಸ್ಕರಣಾ ಘಟಕಗಳು, ಶೀತಲ ಕೇಂದ್ರಗಳು, ಹಾಲಿನ ಡೇರಿಗಳು ಹಾಗೂ ಹಾಲಿನ ಪುಡಿ ಘಟಕಗಳನ್ನು ಹಂತ ಹಂತವಾಗಿ ಈ ಜಿಲ್ಲಾ ಹಾಲು ಒಕ್ಕೂಟಗಳಿಗೆ ವರ್ಗಾಯಿಸಿ ಡೇರಿ ಚಟುವಟಿಕೆಗಳನ್ನು ಮುಂದುವರಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನೆಯಾದ ಹೆಚ್ಚುವರಿ ಹಾಲನ್ನು ರೈತರಿಂದ ತೆಗೆದುಕೊಳ್ಳುತ್ತಾ ಯಾವುದೇ ಕಾರಣಕ್ಕೂ ಹಾಲಿನ ರಜೆ ನೀಡದಂತೆ ಇರಲು ಹಂತ ಹಂತವಾಗಿ ಸರ್ಕಾರ/ಜಿಲ್ಲಾ ಪಂಚಾಯತ್/ಎನ್.ಡಿ.ಡಿ.ಬಿ. ನೆರವಿನಿಂದ ಶೀತಲೀಕರಣ ಸಾಮರ್ಥ್ಯ ಹಾಗೂ ಸಂಸ್ಕರಣಾ ಸಾಮರ್ಥ್ಯಗಳನ್ನು ಪ್ರತಿ ದಶಕದಲ್ಲೂ ಹೆಚ್ಚು ಮಾಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಪ್ರತಿದಿನದ ಸಂಸ್ಕರಣಾ ಸಾಮರ್ಥ್ಯವು 57.40 ಲಕ್ಷ ಲೀಟರ್ಗಳಿದ್ದು ಸದ್ಯದಲ್ಲೇ ಇದನ್ನು ಇನ್ನೂ ಬಲಪಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105